SSS Reaching Out for the Reason...
SSS South Social StaGe |Reaching Out for the Reason...
Follow @South_Social
SSS
Visit blogadda.com to discover Indian blogs
by Akshay Prabhu
Genre : ____
Expand Expand

'ಪ್ರಾಚೀನ ಭಾರತವೆಂಬ ಅದ್ಭುತ' - Manjunath Ajjampura

ಮೂರ್ನಾಲ್ಕು ದಶಕಗಳ ಹಿಂದೆ ಕನ್ನಡದಲ್ಲಾಗಲೀ-ಇಂಗ್ಲಿಷಿನಲ್ಲಾಗಲಿ ಅಪರೂಪವೆಂಬಂತೆ ಒಂದು ಒಳ್ಳೆಯ ಪುಸ್ತಕ ಬಂದರೆ ತುಂಬ ಸಂಭ್ರಮವೆನಿಸುತ್ತಿತ್ತು. ಆ ಕುರಿತಾದ ವಿಮರ್ಶೆ, ಟೀಕೆ, ಅವಲೋಕನಗಳಿಗಾಗಿ ಬೇರೆಬೇರೆ ಪತ್ರಿಕೆ, ನಿಯತಕಾಲಿಕೆಗಳನ್ನು ತಡಕಾಡುತ್ತಿದ್ದುದೂ ಇತ್ತು. ಈಗ ತುಂಬ ತುಂಬ ಬದಲಾವಣೆಯೇ ಆಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ಓದಬೇಕಾದ ಮತ್ತು ತುಂಬ ಮಹತ್ತ್ವದ ಹತ್ತಾರು ಗ್ರಂಥಗಳು ಪ್ರತಿವರ್ಷ ಪ್ರಕಟವಾಗಿವೆ, ಆಗುತ್ತಿವೆ. ಕವನ, ಕಥೆ, ಕಾದಂಬರಿಗಳಿಗಿಂತ ವೈಚಾರಿಕ ಸಾಹಿತ್ಯವು ಮಹತ್ತ್ವ ಪಡೆದಿರುವುದು ಬಹಳ ದೊಡ್ಡ ಸಾಮಾಜಿಕ ಬದಲಾವಣೆ. ಮೂವತ್ತರ ದಶಕದಲ್ಲಿ ಶಿವರಾಮ ಕಾರಂತರ 'ಬಾಲ ಪ್ರಪಂಚ' ಕಿರಿಯರ ವಿಶ್ವಕೋಶದ ಸಂಪುಟಗಳು ಪ್ರಕಟವಾದಾಗ, ಒಂದು ಸಾವಿರ ಪ್ರತಿಗಳು ಮಾರಾಟವಾಗಲು ಹತ್ತುವರ್ಷಗಳಾದುವಂತೆ. ಹಾಗೆಂದು ಕಾರಂತರೇ ದಾಖಲಿಸಿದ್ದಾರೆ. ಈಗ ನೋಡಿ, ಪತ್ರಕರ್ತ ಅರುಣ್ ಶೌರಿ ಅವರ 'ಮಹಾನ್ ಇತಿಹಾಸಕಾರರು' ಕೃತಿಯ ಮೂರು ಸಾವಿರ ಪ್ರತಿಗಳು ಮೂರೇ ತಿಂಗಳಲ್ಲಿ ಮಾರಾಟವಾಗಿವೆ ಎನ್ನುವುದು ಕಡಿಮೆಯ ಸಾಧನೆಯಲ್ಲ. ಜನರು ವೈಚಾರಿಕ-ವೈಜ್ಞಾನಿಕ-ಸಂಕೀರ್ಣ ಕೃತಿಗಳನ್ನು ಕೊಂಡು ಓದುವ - ವ್ಯಾಖ್ಯಾನಿಸುವ ಪರ್ವಕಾಲವಿದು.

Manjunath Ajjampura

ಭಾರತ ಅಧ್ಯಯನಶಾಸ್ತ್ರದ ದೊಡ್ಡಪಂಡಿತರಾದ ಆರ್ಥರ್ ಲೆವೆಲಿನ್ ಬಾಶಂ ಅವರ ಕೃತಿ 'ಪ್ರಾಚೀನ ಭಾರತವೆಂಬ ಅದ್ಭುತ' ಮೂಲಕೃತಿಯು ಇಂಗ್ಲಿಷಿನಲ್ಲಿ ಇಂಗ್ಲೆಂಡಿನಲ್ಲಿ ಆರು ದಶಕಗಳ ಹಿಂದೆ ಪ್ರಕಟವಾಯಿತು. ಐಬಿಎಚ್ ಪ್ರಕಾಶನದವರು ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ಈ ಬೃಹದ್ಗ್ರಂಥವನ್ನು ಹೊರತಂದರು. ವಿದ್ವಾಂಸರಾದ ಧ್ರುವರಾಜ ಮಿಜರ್ಿ ಅವರು ಅಪಾರ ಪರಿಶ್ರಮದಿಂದ ಕನ್ನಡಕ್ಕೆ ಅನುವಾದಿಸಿ 800 ಪುಟಗಳ ಈ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ನಮ್ಮ ಪ್ರಾಚೀನ ಸಂಸ್ಕೃತಿ, ಹರಪ್ಪಾ - ಋಗ್ವೇದಗಳ ಸಂಸ್ಕೃತಿಗಳ ಬಗೆಗೆ, ಅಂತೆಯೇ ಪ್ರಾಚೀನ ಹಾಗೂ ಮಧ್ಯಯುಗದ ಸಾಮ್ರಾಜ್ಯಗಳ ಬಹುಮೂಲ್ಯ ವಿವರಗಳಿಲ್ಲಿವೆ. ಈ ಗ್ರಂಥದಲ್ಲಿ ಮತಧರ್ಮಗಳ ಬಗೆಗೆ, ಸಾಮಾಜಿಕ ರೀತಿನೀತಿಗಳ ಬಗೆಗೆ, ಲಲಿತಕಲೆ-ಶಿಲ್ಪಕಲೆಗಳ ಬಗೆಗೆ, ಅನೇಕ ಭಾರತೀಯ ಭಾಷೆಗಳ ಬಗೆಗೆ ತುಂಬ ತುಂಬ ವಿವರಗಳಿವೆ. ಕ್ರಿಸ್ತಪೂರ್ವ-ಇಸ್ಲಾಂಪೂರ್ವದ ಭಾರತದ ಸಾಮಾಜಿಕ ವ್ಯವಸ್ಥೆ - ಆಡಳಿತ ವ್ಯವಸ್ಥೆಗಳ ವಿವರಗಳು ತುಂಬ ಸ್ವಾರಸ್ಯವಾಗಿವೆ. ಆಡಳಿತದ-ವ್ಯವಸ್ಥೆಯ ಎಲ್ಲವೂ ಮೊಘಲರ-ಬ್ರಿಟಿಷರ 'ಕೊಡುಗೆ' ಎನ್ನುವ ನಮ್ಮ 'ಬುದ್ಧಿಜೀವಿ'ಗಳು, ವಾಮಪಂಥೀಯರು, ಇಂಗ್ಲಿಷರ 'ಔರಸಪುತ್ರ'ರು ಇಂತಹ ಕೃತಿಗಳನ್ನು ಓದುವುದು ಒಳ್ಳೆಯದು.

ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುತ್ತಿತ್ತು. ಯಾವುದನ್ನೂ ಅನಿರೀಕ್ಷಿತ ಘಟನೆಗಳಿಗೆ ಬಿಡುತ್ತಿರಲಿಲ್ಲ.
ರಾಜನ ಶಾಸನಗಳನ್ನು ಸಂಬಂಧಪಟ್ಟ ಜನರಿಗೆ ತಲುಪಿಸುವುದಕ್ಕಾಗಿ ಕಾರ್ಯದರ್ಶಿ ಮತ್ತು ಗುಮಾಸ್ತರುಗಳ ಒಂದು ಪಡೆಯೇ ಇತ್ತು. ತಪ್ಪಾಗದಂತೆ ನೋಡಿಕೊಳ್ಳುವುದಕ್ಕಾಗಿ ಗಮನಾರ್ಹ ಮುನ್ನೆಚ್ಚರಿಕೆಗಳನ್ನು ತೆಗದುಕೊಳ್ಳಲಾಗುತ್ತಿತ್ತು. ಉದಾಹರಣೆಗೆ ಚೋಳರ ಕಾಲದಲ್ಲಿ ರಾಜನ ಆದೇಶಗಳನ್ನು ಮೊದಲು ಕಾರಕೂನರು ರಾಜನು ಹೇಳುತ್ತಿದ್ದಂತೆ ಬರೆದುಕೊಳ್ಳುತ್ತಿದ್ದರು. ಕರಡು ಸರಿಯಾಗಿದೆಯೇ ಎಂಬುದನ್ನು ಪರಿಣತ ಸಾಕ್ಷಿಗಳು ಪರಿಶೀಲಿಸುತ್ತಿದ್ದರು. ಆದೇಶಗಳನ್ನು ಪಡೆಯಬೇಕಾದವರಿಗೆ ಅದು ತಲಪುವ ಮೊದಲು ತುಂಬ ಎಚ್ಚರಿಕೆಯಿಂದ ಇನ್ನೊಮ್ಮೆ ಅವುಗಳನ್ನು ಬರೆಯಲಾಗುತ್ತಿತ್ತು. ಭೂಮಿಯನ್ನು ಅನುದಾನವಾಗಿ ಕೊಡಬೇಕಾದ ಸಂದರ್ಭದಲ್ಲಿ, ಸವಲತ್ತುಗಳನ್ನು ಕೊಡಬೇಕಾದ ಸಂದರ್ಭಗಳಲ್ಲಿ, ರಾಜನ ಆದೇಶಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯವಾಗಿ ರಾಜನ ಆಸ್ಥಾನದಿಂದ ಒಬ್ಬ ಮುಖ್ಯ ಅಧಿಕಾರಿಯನ್ನು ಕಳುಹಿಸಿಕೊಡಲಾಗುತ್ತಿತ್ತು. ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಇಡಲಾಗುತ್ತಿತ್ತು. ಯಾವುದನ್ನೂ ಅನಿರೀಕ್ಷಿತ ಘಟನೆಗಳಿಗೆ ಬಿಡುತ್ತಿರಲಿಲ್ಲ. ಮಂತ್ರಿಗಳನ್ನು-ಉನ್ನತ ಅಧಿಕಾರಿಗಳನ್ನು, ಒಟ್ಟಾಗಿ ಮೊದಲಿನ ಗ್ರಂಥಗಳಲ್ಲಿ, ಮಹಾಮಾತ್ಯರೆಂದು ಕರೆಯಲಾಗಿದೆ. ಖಾತೆಗಳನ್ನು ಆಗಾಗ ಬದಲಾಯಿಸಲಾಗುತ್ತಿತ್ತು. ಬ್ರಾಹ್ಮಣವರ್ಗದ ವೃದ್ಧರೂ ಸೇರಿದಂತೆ, ಎಲ್ಲರೂ ಸೈನಿಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು (ಪುಟ 144).

ಮೌರ್ಯರ ಕಾಲದಲ್ಲಿ ವ್ಯಕ್ತಿಜೀವನದ ಪ್ರತಿಯೊಂದು ಮಗ್ಗುಲ ಮೇಲೂ ಸರಕಾರದ ನಿಗಾ ಇರುತ್ತಿತ್ತು, ಸಾಧ್ಯವಿದ್ದ ಮಟ್ಟಿಗೆ ನಿಯಂತ್ರಣ ಇರುತ್ತಿತ್ತು. ಎಲ್ಲಾ ಗಣಿಗಳು (ಆಗ ಈ ವರ್ಗೀಕರಣಕ್ಕೆ ಮುತ್ತು, ಉಪ್ಪು, ಮೀನುಗಾರಿಕೆಗಳೂ ಸೇರುತ್ತಿದ್ದವು) ಸರಕಾರದ ಒಡೆತನದಲ್ಲಿರುತ್ತಿದ್ದವು. ನೇರವಾಗಿ ಕೈದಿಗಳ-ದಾಸರ ನೆರವಿನಿಂದ ಇಲ್ಲವೇ ಸ್ವತಂತ್ರ ಉದ್ದಿಮೆ ದಾರರಿಗೆ ಗುತ್ತಿಗೆ ನೀಡುವುದರ ಮೂಲಕ, ಸರಕಾರವೇ ಗಣಿಗಳನ್ನು ನಿರ್ವಹಿಸುತ್ತಿತ್ತು. ಆನೆಗಳಿಂದ ಹಿಡಿದು ಉರುವಲು ಕಟ್ಟಿಗೆಯವರೆಗೆ ಅರಣ್ಯದ ಉತ್ಪನ್ನಗಳೆಲ್ಲವೂ ಸರಕಾರದ ಆಸ್ತಿಯಾಗಿದ್ದವು. ಮದ್ದುಗುಂಡುಗಳನ್ನು ಸರಕಾರೀ ಸ್ವಾಮ್ಯದ ಮದ್ದುಗುಂಡುಗಳ ಕಾಖರ್ಾನೆಗಳಲ್ಲಿಯೇ ತಯಾರಿಸಲಾಗುತ್ತಿತ್ತು. ಸರಕಾರೀ ಹಡಗು ನಿರ್ಮಾಣ ಕೇಂದ್ರಗಳಲ್ಲಿ ಹಡಗುಗಳು ನಿರ್ಮಿತವಾಗುತ್ತಿದ್ದವು.... (ಪುಟ 145-146). ನಮ್ಮ ಶ್ರೀಕೃಷ್ಣದೇವರಾಯನ ಬಗೆಗೆ, ರಾಜಕುಮಾರರಿಗೆ ನೀಡುತ್ತಿದ್ದ ತರಬೇತಿಗಳ ಬಗೆಗೆ, ರಾಶಿರಾಶಿ ಮಾಹಿತಿಯಿಲ್ಲಿದೆ. 'ಪ್ರಾಚೀನ ಭಾರತವೆಂಬ ಅದ್ಭುತ' ಗ್ರಂಥವು ನಿಜಕ್ಕೂ ಒಂದು ಅದ್ಭುತವೇ!
- ಮಂಜುನಾಥ ಅಜ್ಜಂಪುರ, ಬೆಂಗಳೂರು.

Labels: ,

0 Comments:

Post a Comment

Subscribe to Post Comments [Atom]

<< Home